ಚಿಟ್ಟಾಣಿ ಸಪ್ತಾಹ ಸಮಾರೋಪ ಸಾಧಕರಿಬ್ಬರಿಗೆ ಪುರಸ್ಕಾರ
ಲೇಖಕರು : ನಾರಾಯಣ ಎಂ. ಹೆಗಡೆ
ಸೋಮವಾರ, ನವ೦ಬರ್ 9 , 2015
|
ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ನಡೆದ, ಉಡುಪಿಯ ಚಿಟ್ಟಾಣಿ ಅಭಿಮಾನಿ ಬಳಗ ಆಯೋಜಿಸಿರುವ ಚಿಟ್ಟಾಣಿ ಸಪ್ತಾಹ 2015ರ ಸಮಾರೋಪ ಸಮಾರಂಭದಲ್ಲಿ ಹಿರಿಯ ಭಾಗವತ ಸುಬ್ರಹ್ಮಣ್ಯ ಧಾರೇಶ್ವರರಿಗೆ ಪದ್ಮಶ್ರೀ ಚಿಟ್ಟಾಣಿ ರಾಮಚಂದ್ರ ಹೆಗಡೆ ಪ್ರಶಸ್ತಿ ಹಾಗೂ ಹವ್ಯಾಸಿ ಕಲಾವಿದ ಬನ್ನಂಜೆ ನಾರಾಯಣರಿಗೆ ಟಿ.ವಿ. ರಾವ್ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಲಾಯಿತು.
ಸುಬ್ರಹ್ಮಣ್ಯ ಧಾರೇಶ್ವರ
ಬಡಗುತಿಟ್ಟಿನ ಅಗ್ರಮಾನ್ಯ ಭಾಗವತರಲ್ಲಿ ಓರ್ವರಾದ ಸುಬ್ರಹ್ಮಣ್ಯ ಧಾರೇಶ್ವರ ಅವರು ಸಾಂಪ್ರದಾಯಿಕತೆಯೊಂದಿಗೆ ಪ್ರಯೋಗಶೀಲತೆಯನ್ನು ಮೇಳೈಸಿ ಕಲಾರಸಿಕರ ಮನ ಗೆದ್ದವರು. ಇವರು ಮೂಲತಃ ಉತ್ತರಕನ್ನಡದ ಗೋಕರ್ಣದವರು. ಶಾಸ್ತ್ರೀಯ ಸಂಗೀತಾಭ್ಯಾಸ ಮಾಡಿದ್ದ ಧಾರೇಶ್ವರರಿಗೆ ನಾರ್ಣಪ್ಪ ಉಪ್ಪೂರರು ಗುರುವಾಗಿ ದೊರೆತರು. ಉಪ್ಪೂರರ ಶಿಷ್ಯರೇ ಆದ ಕಾಳಿಂಗ ನಾವಡರ ಹಾಡುಗಾರಿಕೆಯು ಇವರ ಮೇಲೆ ಸಾಕಷ್ಟು ಪ್ರಭಾವ ಬೀರಿತು. ತನಗಿದ್ದ ಸುಮಧುರ ಶಾರೀರವನ್ನು ಪರಿಣಾಮಕಾರಿಯಾಗಿ ಬಳಸಿಕೊಂಡು ಬಹುಬೇಗನೆ ಮುಖ್ಯ ಭಾಗವತರಾಗಿ ಮೇಳದಲ್ಲಿ ಅವಕಾಶ ಪಡೆದರು.
ಅಮೃತೇಶ್ವರೀ, ಹಿರೇಮಹಾಲಿಂಗೇಶ್ವರ, ಶಿರಸಿ ಪಂಚಲಿಂಗ ಮೇಳಗಳಲ್ಲಿ ತಿರುಗಾಟ ಮಾಡಿ ಮುಂದೆ 3 ದಶಕಗಳ ಕಾಲ ಪೆರ್ಡೂರು ಮೇಳದಲ್ಲಿ ಪ್ರಧಾನ ಭಾಗವತರಾಗಿ ಪೌರಾಣಿಕ ಮತ್ತು ಹೊಸ ಪ್ರಸಂಗಗಳು ರಂಗದಲ್ಲಿ ವಿಜೃಂಭಿಸುವಂತೆ ಮಾಡಿದ್ದಾರೆ. ಗುರು ನಾರ್ಣಪ್ಪ ಉಪ್ಪೂರರಂತೆ ರಂಗತಂತ್ರ ಮತ್ತು ರಂಗದ ಮೇಲಿನ ಸಂಪೂರ್ಣ ಹಿಡಿತ ಸಾಧಿಸಿದ ಭಾಗವತರು. ಖಚಿತ ಲಯಗಾರಿಕೆ, ತಾಳ, ಸ್ಪುಟವಾದ ಸಾಹಿತ್ಯ ನಿರೂಪಣೆ ಇವರ ವಿಶೇಷತೆ. ಪುರಾಣ ಪ್ರಸಂಗಗಳ, ಪದ್ಯಗಳ ಮಟ್ಟು-ತಿಟ್ಟುಗಳ ಗುಟ್ಟನ್ನು ಚೆನ್ನಾಗಿ ಬಲ್ಲ ಇವರು ಪಾರಂಪ ರಿಕತೆಗೆ ಹೊಸತನದ ಸ್ಪರ್ಶ ನೀಡಿದವರು. ಹಿಮ್ಮೇಳ ವೈಭವದ ಪರಿಕಲ್ಪನೆ ಇವರ ಇನ್ನೊಂದು ಕೊಡುಗೆ. 1988 ರಲ್ಲೇ ಅದನ್ನು ಪ್ರಯೋಗಕ್ಕೆ ತಂದು ಯಶಸ್ಸು ಕಂಡವರು. ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿ ಸದಸ್ಯರಾಗಿಯೂ ಕಾರ್ಯ ನಿರ್ವಹಿಸಿದ್ದಾರೆ. ಕಳೆದ 10 ವರ್ಷಗಳಿಂದ ಧಾರೇಶ್ವರ ಯಕ್ಷ ಬಳಗ ಚಾರಿಟೇಬಲ್ ಟ್ರಸ್ಟ್ ಸ್ಥಾಪಿಸಿ ತಾಳ ಮದ್ದಳೆ ಸಪ್ತಾಹ, ಯಕ್ಷಗಾನದ ಕುರಿತ ಗೋಷ್ಠಿಗಳನ್ನು ನಡೆಸುತ್ತ ಸಂಘಟಕರಾಗಿಯೂ ಕಲಾಸೇವೆಗೈಯುತ್ತಿದ್ದಾರೆ.
ಬನ್ನಂಜೆ ನಾರಾಯಣ
ಶಿಸ್ತು, ಸಮಯಪ್ರಜ್ಞೆ, ಸ್ವಾಭಿಮಾನದ ಪ್ರತಿರೂಪದಂತಿರುವ ಬನ್ನಂಜೆ ನಾರಾಯಣ ಅವರದು 70ರ ಅಂಚಿನಲ್ಲೂ ಕ್ರಿಯಾಶೀಲ ವ್ಯಕ್ತಿತ್ವ. ತಾಲೂಕು ಡೆವಲಪ್ಮೆಂಟ್ ಬೋರ್ಡಿನಲ್ಲಿ ವೃತ್ತಿ ಆರಂಭಿಸಿ ಸರಕಾರಿ ಉದ್ಯೋಗಿಯಾಗಿ ಬೇರೆ ಬೇರೆ ಕಚೇರಿಗಳಲ್ಲಿ ದುಡಿದು ಉಡುಪಿ ಸರಕಾರಿ ಪ್ರೌಢಶಾಲೆ (ಬೋರ್ಡ್ ಹೈಸ್ಕೂಲ್)ಯಲ್ಲಿ ಗ್ರಂಥಪಾಲಕ ಕೆಲಸ ನಿರ್ವಹಿಸಿ ಸ್ವಯಂ ನಿವೃತ್ತಿ ಪಡೆದರು. ತಾನು ಕಾರ್ಯನಿರ್ವಹಿಸಿದಲ್ಲೆಲ್ಲ ಶಿಸ್ತು ಕ್ರಮಬದ್ಧತೆಯನ್ನು ರೂಢಿಸಿದವರು. ನಿವೃತ್ತಿಯ ಬಳಿಕ ಯಾವುದೇ ಪ್ರತಿಫಲದ ಅಪೇಕ್ಷೆ ಇಲ್ಲದೆ ಸಾಮಾಜಿಕ ಚಟುವಟಿಕೆಗಳಲ್ಲಿ ಕ್ರಿಯಾಶೀಲರು. ಉಡುಪಿಯ ಯಕ್ಷಗಾನ ಕಲಾರಂಗದ ಸಕ್ರಿಯ ಕಾರ್ಯಕರ್ತರು.
ಇವರಿಗೆ ಯಕ್ಷಗಾನ ಪ್ರವೃತ್ತಿ. ಕಾಂತಪ್ಪ ಮಾಸ್ತರರಿಂದ ಯಕ್ಷಗಾನದ ಮೂಲ ಪಾಠ ಕಲಿತು ಉಡುಪಿ ಯಕ್ಷಗಾನ ಕೇಂದ್ರದ ಗುರು ವೀರಭದ್ರ ನಾಯಕರಿಂದ ನೃತ್ಯವನ್ನೂ ನೀಲಾವರ ರಾಮಕೃಷ್ಣಯ್ಯನವರಿಂದ ಯಕ್ಷಗಾನ ಭಾಗವತಿಕೆಯನ್ನೂ ಹಿರಿಯಡಕ ಗೋಪಾಲರಾಯರಿಂದ ಮದ್ದಲೆಯನ್ನೂ ಅಭ್ಯಾಸ ಮಾಡಿದರು. ಯಕ್ಷಗಾನ ವೇಷಧಾರಿಯಾಗಿ ಪುರುಷ ಮತ್ತು ಪುಂಡು ವೇಷಗಳನ್ನು ಸಮರ್ಥವಾಗಿ ನಿರ್ವಹಿಸಿದ್ದಾರೆ. ಮಂಜುಳಾ ಯಕ್ಷಗಾನ ಕಲಾಮಂಡಳಿಯಲ್ಲಿ ದೀರ್ಘಕಾಲ ಟಿ.ವಿ. ರಾಯರಿಗೆ ಮದ್ದಳೆ ಸಾಥ್ ನೀಡಿದ್ದರು. ಯಕ್ಷಗುರುವಾಗಿ ಅಂಬಲಪಾಡಿ ಶ್ರೀಲಕ್ಷ್ಮೀಜನಾರ್ದನ ಯಕ್ಷಗಾನ ಕಲಾಮಂಡಳಿ ಸಹಿತ ಹಲವಾರು ಸಂಘಟನೆಗಳಲ್ಲಿ ದುಡಿದಿದ್ದಾರೆ. ಜತೆಗೆ 20 ಯಕ್ಷಗಾನ ಪ್ರಸಂಗಗಳಿಗೆ ಅರ್ಥ ಸಾಹಿತ್ಯ ಬರೆದಿದ್ದಾರೆ.
*********************
ಕೃಪೆ :
udayavani
|
|
|